ಒಡಿಐ ವಿಶ್ವಕಪ್‌ - ಭಾರತದ ಬಹುದೊಡ್ಡ ಎಡವಟ್ಟಿನ ಬಗ್ಗೆ ಎಚ್ಚರಿಸಿದ ಅರ್ಜುನ ರಣತುಂಗ

ICC ODI World Cup 2023: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರವೇ ಬಾಕಿಯಿದೆ. ಅಕ್ಟೋಬರ್‌ 5ರಂದು ಶುರುವಾಗಲಿರುವ ಟೂರ್ನಿಗೆ ಈಗಾಗಗಲೇ ಟೀಮ್ ಇಂಡಿಯಾ ಪ್ರಕಟವಾಗಿದ್ದು, 15 ಆಟಗಾರರ ಬಲಿಷ್ಠ ತಂಡದಲ್ಲಿ ಕೆಲ ಪ್ರಮುಖ ಆಟಗಾರರು ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ 1996ರ ವಿಶ್ವ ಚಾಂಪಿಯನ್ಸ್‌ ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ ರಣತುಂಗ, ಈ ಬಾರಿ ಆತಿಥೇಯ ಟೀಮ್ ಇಂಡಿಯಾ ಮಾಡಬಹುದಾದ ಬಹುದೊಡ್ಡ ಎಡವಟ್ಟಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಒಡಿಐ ವಿಶ್ವಕಪ್‌ - ಭಾರತದ ಬಹುದೊಡ್ಡ ಎಡವಟ್ಟಿನ ಬಗ್ಗೆ ಎಚ್ಚರಿಸಿದ ಅರ್ಜುನ ರಣತುಂಗ
ಬೆಂಗಳೂರು: ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿ ಆಯೋಜನೆ ಆಗುತ್ತಿದೆ. ಈ ಬಗ್ಗೆ ಮಾತನಾಡಿರುವ 1996ರ ವಿಶ್ವ ಚಾಂಪಿಯನ್ಸ್‌ ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ ರಣತುಂಗ, ಆತಿಥೇಯ ಟೀಮ್ ಇಂಡಿಯಾ ತಾಯ್ನಾಡಿನ ಪ್ರೇಕ್ಷಕರ ಎದುರು ಟ್ರೋಫಿ ಗೆಲ್ಲಲೇ ಬೇಕಾದ ಒತ್ತಡದೊಂದಿಗೆ ಆಡಲಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ತನ್ನ ಆಡುವ 11ರ ಬಳಗದಲ್ಲಿ ಅನುಭವಿ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ಗೆ ಸ್ಥಾನ ಕೊಡದೇ ಇದ್ದರೆ, ಬಹುದೊಡ್ಡ ಎಡವಟ್ಟು ಮಾಡಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ."ಮುಂಬರುವ ವಿಶ್ವಕಪ್‌ ಟೂರ್ನಿ ಭಾರತದಲ್ಲೇ ನಡೆಯುತ್ತಿರುವು ಆತಿಥೇಯ ಟೀಮ್ ಇಂಡಿಯಾಗೆ ಬಹುದೊಡ್ಡ ಅನುಕೂಲವಾಗಿದೆ. ಅಂದಹಾಗೆ ಇದರ ಜೊತೆಗೆ ಅನಾನುಕೂಲವೂ ಇದ್ದು, ತಾಯ್ನಾಡಿನ ಪ್ರೇಕ್ಷಕರ ಎದುರು ಟ್ರೋಫಿ ಗೆಲ್ಲಲೇ ಬೇಕಾದ ಅತೀವ ಒತ್ತಡ ಭಾರತ ತಂಡದ ಮೇಲಿದೆ. ಭಾರತದಲ್ಲಿ ಪ್ರೇಕ್ಷಕರು ಟೀಮ್ ಇಂಡಿಯಾ ಆಟಗಾರರ ಮೇಲೆ ಇನ್ನಿಲ್ಲದ ಒತ್ತಡ ಹೇರುತ್ತಾರೆ. ಎದುರಾಳಿಗಳ ಸವಾಲನ್ನು ಮೆಟ್ಟಿನಿಲ್ಲುವುದರ ಜೊತೆಗೆ ಟೀಮ್ ಇಂಡಿಯಾ ಆಟಗಾರರು ಪ್ರೇಕ್ಷಕರ ನಿರೀಕ್ಷೆಯ ಭಾರವನ್ನೂ ಹೊರಬೇಕಿದೆ," ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಬರೆದಿರುವ ಲೇಖನದಲ್ಲಿ ರಣತುಂಗ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಭಾರತ ತಂಡಕ್ಕೆ ಆಫ್‌ ಸ್ಪಿನ್ನರ್‌ ಬೇಕುಇದೇ ವೇಳೆ ವಿಶ್ವಕಪ್‌ಗೆ ಆಯ್ಕೆ ಮಾಡಿರುವ ಭಾರತ ತಂಡದ ಬಗ್ಗೆ ಮಾತನಾಡಿರುವ ಶ್ರೀಲಂಕಾದ ಮಾಜಿ ನಾಯಕ ಟೀಮ್ ಇಂಡಿಯಾದ ಆಡುವ 11ರ ಬಳಗದಲ್ಲಿ ಒಬ್ಬ ಪರಿಣತ ಆಫ್‌ ಸ್ಪಿನ್ನರ್‌ನ ಅಗತ್ಯವಿದೆ ಎಂದು ಹೇಳಿದ್ದಾರೆ. ಆಫ್‌ ಸ್ಪಿನ್ನರ್‌ ಆಡಿದರೆ ಎದುರಾಳಿ ತಂಡದ ಎಲ್ಲ 10 ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದಿದ್ದಾರೆ."ಟೀಮ್ ಇಂಡಿಯಾ ಹೆಚ್ಚಾಗಿ ತನ್ನ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌ ಕಡೆಗೆ ಹೆಚ್ಚು ಗಮನ ನೀಡಿದೆ. ಆದರೆ, ನನ್ನ ಪ್ರಕಾರ ತಂಡದಲ್ಲಿ ಆರ್‌ ಅಶ್ವಿನ್‌ ಅವರಂತಹ ಅನುಭವಿ ಆಫ್‌ ಸ್ಪಿನ್ನರ್‌ ಇರಲೇ ಬೇಕು. ಅಶ್ವಿನ್‌ ಆಡಿದರೆ ಅವರು ಅಪ್ಪಟ ಮ್ಯಾಚ್‌ ವಿನ್ನರ್‌. ಉಳಿದವರಿಗೆ ಹೋಲಿಸಿದರೆ ಅಶ್ವಿನ್‌ಗೆ ಹೆಚ್ಚು ವಯಸ್ಸಾಗಿದೆ ನಿಜ. ಫೀಲ್ಡ್‌ನಲ್ಲಿ ಅವರು ಓಡುವುದು ಸ್ವಲ್ಪ ನಿಧಾನ ಸರಿ. ಆದರೆ, ಏಷ್ಯಾ ಭಾಗದ ಪಿಚ್‌ಗಳಲ್ಲಿ ವಿಕೆಟ್‌ ಪಡೆಯುವ ಸಾಮರ್ಥ್ಯವಿರುವ ಸ್ಪಿನ್ನರ್‌ನ ಅಗತ್ಯ ತಂಡಕ್ಕಿದೆ," ಎಂದು ಹೇಳಿದ್ದಾರೆ. ಆಸೀಸ್‌ ವಿರುದ್ಧದ ಸರಣಿಯಲ್ಲಿ ಅಗ್ನಿ ಪರೀಕ್ಷೆಪ್ರವಾಸಿ ಆಸ್ಟ್ರೇಲಿಯಾ ಎದುರು ಸೆಪ್ಟೆಂಬರ್‌ 22ರಿಂದ 26ರವರೆಗೆ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಗೆ ಆಯ್ಕೆ ಮಾಡಲಾಗಿರುವ 17 ಆಟಗಾರರ ಭಾರತ ತಂಡದಲ್ಲಿ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌ ಸ್ಥಾನ ಪಡೆದಿದ್ದಾರೆ. ಈಗಾಗಗಲೇ ಪ್ರಕಟವಾಗಿರುವ ವಿಶ್ವಕಪ್‌ನ 15 ಆಟಗಾರರ ತಂಡದಲ್ಲಿ ಅಶ್ವಿನ್‌ಗೆ ಸ್ಥಾನ ಸಿಕ್ಕಿಲ್ಲ. ವಿಶ್ವಕಪ್‌ ತಂಡದಲ್ಲಿ ಈಗಲೂ ಬದಲಾವಣೆ ತರಲು ಅವಕಾಶ ಇರುವುದರಿಂದ, ಆಸೀಸ್‌ ವಿರುದ್ಧದ ಸರಣಿಯಲ್ಲಿ ಅಶ್ವಿನ್‌ ಪ್ರದರ್ಶನ ಅತ್ಯಂತ ಮಹತ್ವದ್ದಾಗಲಿದೆ. ಈ ಸರಣಿಯಲ್ಲಿ 37 ವರ್ಷದ ಅನುಭವಿ ಆಟಗಾರ ಅಶ್ವಿನ್‌ಗೆ ಅಗ್ನಿ ಪರೀಕ್ಷೆ ನಡೆಯಲಿದೆ ಎಂದರೆ ತಪ್ಪಾಗಲಾರದು."ಟೀಮ್ ಇಂಡಿಯಾ ಬೇರೆಯದ್ದೇ ಲೆಕ್ಕಾಚಾರ ಹಾಕಿಕೊಂಡಿರಬಹುದು. ಆದರೆ ನನಗಂತೂ ತಂಡದಲ್ಲಿ ಅಶ್ವಿನ್‌ ಆಡಲೇ ಬೇಕು. ಆಫ್‌ ಸ್ಪಿನ್ನರ್‌ ಇಲ್ಲದೇ ಇದ್ದರೆ ಆ ತಂಡದ ಬೌಲಿಂಗ್‌ ವಿಭಾಗ ಅಪರಿಪೂರ್ಣ," ಎಂದು ಅರ್ಜುನ್ ರಣತುಂಗ ವಿವರಿಸಿದ್ದಾರೆ. ಆಸೀಸ್‌ ವಿರುದ್ಧ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡಕೆಎಲ್ ರಾಹುಲ್ (ಕ್ಯಾಪ್ಟನ್‌/ವಿಕೆಟ್‌ಕೀಪರ್‌), ರವೀಂದ್ರ ಜಡೇಜಾ (ವೈಸ್‌ಕ್ಯಾಪ್ಟನ್‌), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್‌ಕೀಪರ್), ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.ಆಸೀಸ್‌ ವಿರುದ್ಧ 3ನೇ ಪಂದ್ಯಕ್ಕೆ ಭಾರತ ತಂಡ ಹೀಗಿದೆರೋಹಿತ್ ಶರ್ಮಾ (ಕ್ಯಾಪ್ಟನ್‌), ಹಾರ್ದಿಕ್ ಪಾಂಡ್ಯ, (ವೈಸ್‌ಕ್ಯಾಪ್ಟನ್‌), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಅಕ್ಷರ್ ಪಟೇಲ್ (ಫಿಟ್ನೆಸ್‌ ಖಾತ್ರಿಯಾಗಬೇಕಿದೆ), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಆರ್ ಅಶ್ವಿನ್, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್.