ಮೂರು ಡಿಸಿಎಂ ಹುದ್ದೆ, ರಾಜಣ್ಣ ಹೇಳಿಕೆಯಲ್ಲಿ ತಪ್ಪಿಲ್ಲ - ಡಾ. ಜಿ ಪರಮೇಶ್ವರ್
ಮೂರು ಡಿಸಿಎಂ ಹುದ್ದೆ, ರಾಜಣ್ಣ ಹೇಳಿಕೆಯಲ್ಲಿ ತಪ್ಪಿಲ್ಲ - ಡಾ. ಜಿ ಪರಮೇಶ್ವರ್
ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ವಲಯದಲ್ಲೀಗ ಮೂರು ಡಿಸಿಎಂ ಹುದ್ದೆ ಸೃಷ್ಟಿಯ ಬಗ್ಗೆ ಹುಟ್ಟಿಕೊಂಡಿರುವ ಚರ್ಚೆ ದಿನೇ ದಿನೇ ಕಾವು ಪಡೆಯುತ್ತಿದೆ. ಸೆ. 21ರಂದು ಬೆಂಗಳೂರಿನಲ್ಲಿ ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರೂ ಡಿಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ಪ್ರತಿಕ್ರಿಯೆ ನೀಡಿದ್ದಾರೆ. ಡಿಸಿಎಂ ವಿಚಾರದಲ್ಲಿ ಸಚಿವ ರಾಜಣ್ಣನವರು ಹೇಳಿದ್ದರಲ್ಲಿ ತಪ್ಪೇನಿಲ್ಲ ಎಂದಿರುವ ಅವರು, ಕೆಲವು ನಿರ್ದಿಷ್ಟ ಸಮುದಾಯಗಳನ್ನು ಸೆಳೆಯುವ ನಿಟ್ಟಿನಲ್ಲಿ ಅವರು ಹಾಗೆ ಹೇಳಿದ್ದಾರೆ. ಅದು ಚುನಾವಣೆಗೂ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು: ಮೂರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ಸಚಿವ ಕೆ.ಎನ್ ರಾಜಣ್ಣ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ! ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು. ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಡಿಸಿಎಂ ವಿಚಾರದಲ್ಲಿ ರಾಜಣ್ಣ ಹೇಳೋದರಲ್ಲಿ ತಪ್ಪಿಲ್ಲ. ಅವರು ಲೋಕಸಭಾ ಚುನಾವಣೆ ದೃಷ್ಟಿಯಿಂದ ಹೇಳಿದ್ದಾರೆ ಎಂದರು. "ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಬೇಕು. ಕೆಲವು ನಿರ್ದಿಷ್ಟ ಸಮುದಾಯಗಳನ್ನು ಸೆಳೆಯಬೇಕು ಎಂಬ ದೃಷ್ಟಿಯಿಂದ ಹೇಳಿದ್ದಾರೆ .ಒಂದು ಸಂದೇಶ ಹೋಗಲಿ ಎಂದು ಅವರು ಹೇಳಿದ್ದಾರೆ'' ಎಂದು ಸಮರ್ಥಿಸಿಕೊಂಡರು. ರಾಜಣ್ಣ ಅವರು ತಪ್ಪು ಮಾಡಿದರು, "ತಪ್ಪು ಹೇಳಿದರು ಅನ್ನೋದು ತಪ್ಪು. ಡಿಸಿಎಂ ವಿಚಾರವಾಗಿ ರಾಜಣ್ಣ ಅವರು ವೈಯುಕ್ತಿಕ ಹೇಳಿಕೆ ಕೊಟ್ಟಿದ್ದಾರೆ. ನಾನು ವೈಯುಕ್ತಿಕ ಹೇಳಿಕೆ ಕೊಡುತ್ತೇನೆ.ಆದರೆ ಅವರು ಯಾವ ಅರ್ಥದಲ್ಲಿ ಕೊಟ್ಟಿದ್ದಾರೆ ಅನ್ನೋದು ಮುಖ್ಯ'' ಎಂದರು. "ಅಂತಿಮವಾಗಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಸಂಪೂರ್ಣವಾಗಿ ಎಲ್ಲವೂ ಹೈ ಕಮಾಂಡ್ ಗೆ ಬಿಟ್ಟಿರುವುದು. ಲೋಕಸಭೆಯಲ್ಲಿ ಸೋತಾಗ ಬಹುಮತ ಇಲ್ಲ ಎಂದು ಸರ್ಕಾರ ವಿಸರ್ಜಸಿದ ಘಟನೆ ನಡೆದಿದೆ ಎಂಬ ರಾಜಣ್ಣ ಹೇಳಿಕೆ ಇದ್ದರೆ ಇರಬಹುದು. ಇದಕ್ಕೆ ಪೂರಕವಾಗಿ ಈ ಹಿಂದೆ ಅಂತಹ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಈ ಹಿಂದೆ ರಾಮಕೃಷ್ಣ ಹೆಗ್ಡೆ ಅವರ ಕಾಲದಲ್ಲಿ ಹಾಗೂ ಬೇರೆ ಬೇರೆ ಸಂದರ್ಭದಲ್ಲಿ ಇಂತಹಾ ಪ್ರಸಂಗಗಳು ನಡೆದಿದೆ. ಆದರೆ ಈ ಬಾರಿ ಹಾಗೆ ಆಗಬಾರದು ಎಂದು ಎಚ್ಚರಿಕೆ ಕೊಟ್ಟಿರಬಹುದು'' ಎಂದರು."ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಬಂದರೆ ನಮಗೆ ಅನುಕೂಲ ಅಲ್ವಾ ಅದಕ್ಕೆ ಇದೆಲ್ಲಾ ಸರ್ಕಸ್ ನಡೆಯುತ್ತಿರುವುದು. ಈ ನಿಟ್ಟಿನಲ್ಲಿ ಕೆ.ಎನ್ ರಾಜಣ್ಣ ಹೇಳಿಕೆಯನ್ನು ತಪ್ಪು ಎಂದು ಹೇಳಲು ಆಗಲ್ಲ ಎಂದು ಹೇಳಿದರು.
ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ
ಇನ್ನು ಇದೇ ಸಂದರ್ಭದಲ್ಲಿ ಕಾವೇರಿ ವಿವಾದದ ಬಗ್ಗೆ ಮಾತನಾಡಿ, "ಕಾವೇರಿ ವಿಚಾರದಲ್ಲಿ ಸಿಎಂ ಹಾಗೂ ಡಿಸಿಎಂ ದೆಹಲಿಯಲ್ಲಿ ಸಭೆ ನಡೆಸಿದ್ದಾರೆ. ನಮ್ಮಲ್ಲಿ ನೀರಿಲ್ಲ ಡೆಡ್ ಸ್ಟೋರೇಜ್ 10 ಸಾವಿರ ಟಿಎಂಸಿ ನೀರಿದೆ ಅಷ್ಟೇ. ಇನ್ನೊಂದು 10 ಸಾವಿರ ಟಿಎಂ ಸಿ ಬೆಂಗಳೂರು ಕುಡಿಯುವ ನೀರಿಗೆ ಬೇಕಿದೆ. ಪ್ರಾಧಿಕಾರ ಹೇಳಿದಂತೆ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ಸ್ ಅಂದರೆ 65 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕಾಗುತ್ತೆ ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ'' ಎಂದರು.